ಪ್ರತಿ ಸೈನಿಕನು ಸಾಯುತ್ತಾನೆ
ವೀರಗಲ್ಲು ಆಗಬೇಕೆಂದಲ್ಲ
ಅಂತ:ಪುರದಿ ಹಾಸಿಗೆ
ಹಂಚಿಕೊಂಡ ದಾಸಿಯರು
ಸಿಂಹಾಸನದ ದಿನ ಹೂ ಸುರಿದಷ್ಟೇ ಸರಳ !
ಸತ್ತ ಉತ್ತರಕುಮಾರನ
ಸಮಾಧಿಯ ಮೇಲೆ ತಲವಾರು
ನೆಡುತ್ತಾರೆ ; ತರುವಾಯ
'ವೀರ ಸ್ವರ್ಗವಾಸಿ ಪ್ರಚಂಡ ದಿಗ್ವಿಜಯಿ'
ಎಂದು ಬರೆದವನ ಬೆನ್ನಿಗೆ
ಚೂರಿ ಇಡುತ್ತಾರೆ!
ನಗಾರಿ ಸದ್ದಿಗೆ ಹೆಜ್ಜೆ ಹಾಕಿದವರೇ
ಊರು ತೊರೆದರು
ಅವರವರ ಆಯುಷ್ಯದ ಬಿಂದಿಗೆ ಹೊತ್ತು!
ಕೋಟೆಯ ತುಂಬ ಈಟಿ
ಕಂಡವರ ಹೃದಯದಲಿ ಲೋಹ
ಹರಿಯುತ್ತಿರಬೇಕು!
ಎದುರಾಳಿಯ ಮಾಹಿತಿಯಿಲ್ಲದವರು
ವಿಳಾಸ ಹುಡಿಕಿ ಹೊರಟಿದ್ದಾರೆ
ಒಂದುವೇಳೆ ಅಂದುಕೊಂಡಂತೆ
ಅವರ ಮುಖದ ಮೇಲೆ ಗಡ್ಡ, ಬಿಳಿ ಟೊಪ್ಪಿಗೆ
ಅಥವಾ ಕೊರಳಲ್ಲಿ ಕ್ರಾಸಿನ ಚಿನ್ಹೆಗಳಿದ್ದರೆ
ದಾಳಿ ನಿಶ್ಚಿತವೆಂದು ಸಾರಲು!
ಹಾಗೆ ಮೈದಾನದಲಿ ಮೈಮರೆತ
ಅವರ ಮಕ್ಕಳು ಕುಡುಕ; ತಲೆಹಿಡುಕ
ಮತ್ತೆ ಕೊಲೆಗಡುಕರಾಗುತ್ತಾರೆ , ಇಲ್ಲ
ಅವರೂ ವಿಳಾಸ ಹುಡುಕಿ ಹೊರಡುತ್ತಾರೆ
ಹೀಗೆ ಇತಿಹಾಸ ನೆಪವಾಗುತ್ತದೆ
ಮನೆಯೆದುರು ಬದುಕುವವನಿಗೆ!
-ಅರೋಲಿ ರಮೇಶ್.