Monday, April 6, 2009

ಕಾದು ಕುಂತೀವಿ ನಾವು ಹೆಳವಯ್ಯ ಬಾರೋ..!



ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ !

ಹಂಗಿದ್ದೆ ಹಿಂಗಿದ್ದೆ ಸರದಾರನಂಗಿದ್ದೆ
ಅಮವಾಸೆ ಕತ್ತಲಿಗೆ ಬೆಂಕಿ ಕಲ್ಲುಜ್ಜಿದ್ದೆನೆಂದಿ
ಊರಗೌಡನ ಉಪ್ಪರಿಗೆಗೆ ಸುಣ್ಣವಾಗಿದ್ದೆನೆಂದಿ
ಕೇರಿ ಕರಿಯವ್ವನ ಹುಟ್ಟು ತಿಳಿದೆದ್ದೆನೆಂದಿ
ಉಂಡುಗಿದ ಬೀಡಕ್ಕೆ ರಂಗೇರಿದ್ದೆನೆಂದಿ
ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ !

ಕಲ್ಲು ಕಲ್ಲಿನ ಮನೆಯ ಕಣಿ ಹೇಳಿದ್ದೆನೆಂದಿ
ಮಂಚ ಮಂಚದ ಮಾತಿಗೆ ಕಿವಿಯಾಗಿದ್ದೆನೆಂದಿ
ವಂಶ ಬೀಜದ ಮೂಲ ನೋಡಿದ್ದೆನೆಂದಿ
ಚುಕ್ಕಿ ಚಂದ್ರರ ಗಂಟು ಬಿಚ್ಚಿದ್ದೆನೆಂದಿ
ಭೂಮಿ ಬಾನಿಗೆ ನೀನೆ ಕತೆ ಹೇಳಿದ್ದೆನೆಂದಿ
ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ !

ಕಟ್ಟಕಡೆ ಗುಡಿಸಲಿಗೆ ಬರ್ತೀನಿ
ಪಾಪ-ಪುಣ್ಯದ ಗುಟ್ಟು ಹೇಳ್ತೀನಿ ಎಂದಿ
ಬಾಬಾರೋ ಹೆಳವಯ್ಯ ಮರ್ತೀವಿ ಎಂದಿ
ಕಾದು ಕುಂತೀವಿ ನಾವು ಪಂಚಮರ ಮಂದಿ
ದಿಟ ನುಡಿವೆ ಮಣ್ಣ ಕಳೆಗಿನ್ನು ಕೊನೆಗಾಲ ಎಂದಿ
ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ!

No comments: