Friday, April 3, 2009

ಓಡಿ ಹೋದವಳಲೊಂದು ವಿನಂತಿ..!



ಒಂದು ಶರದೃತುವಿನ
ಬೆಳ್ಳಂ ಬೆಳದಿಂಗಳ ರಾತ್ರಿ
ಗೋದಾವರಿ ತೀರದಿ ಮರುಳ ರಾಶಿಯ ಮೇಲೆ
ಪಿಸುಗುಟ್ಟಿದ ಮಾತಿನ ಮೇಲಾಣೆ
ಅಡುಗೆಗಾಗಿ;ಅರ್ಧ ರಾತ್ರಿಯ ನಿಮಿಷೆಗಳಿಗಾಗಿ
ಗಂಡನೊಂದಿಗೆ ಉಳಿದಾಕೆ
ಅಂದು ಮದ್ಯಾನದ ಸೋಮಾರಿ ಗಾಳಿ
ಆಕೆಯ ಎದೆ ತಾಕಿದಾಗಲೇ
ಯಾರೋ ಗಾಢ ನೋಟದಿ ಬೆನ್ನು ಸವರಿದಂತೆನಿಸಿ
ನದಿ ನೀರಿನಲಿ ನಕ್ಷತ್ರ ಹೂಗಳು
ಸ್ವರ್ಗದ ಶವ ಯಾತ್ರೆಗೆ ಹೊರಡುವ ಹೊತ್ತು
ಬಿಕಾರಿ ಸುಂದರ ತುರುಕನೊಂದಿಗೆ
ಆಕೆಯ ಹೆಜ್ಜೆ ಸಾಗಿದಂತಿತ್ತು!

ಓಡಿ ಹೋದವಳಿಗೆ
ಕಡಿಮೆಯಾದದ್ದಾದರು ಏನು?
ಪಾಪ ಮೆಲುಕು ಹಾಕಿದರು ಮರ್ಯಾದಸ್ತರು
ರಾತ್ರಿ ಊಟದ ನಂತರ!


ಅಮೀರ್ `ಅಂದು ರಾತ್ರಿ
ನನ್ನನು ಅವರು ಹಡಗಿನ ಹಾಗೆ ದೂಡಿದರು
ಅವನ ಕೋಣೆಗೆ ' ಎಂದಳಾಕೆ
`ಆ ಮುತ್ತೈದೆ ಮುಂಡೆಯರೇ ಅಷ್ಟು
ಪುರಾಣ ಸ್ತ್ರೀಯರ ಹಾಗೆ ಗರತಿಗಿರಿಗಾಗಿ
ಪುಣ್ಯ ದಕ್ಕಿಸಿಕೊಳ್ಳುವ ನೆನಪದಿ
ಗಂಡಂದಿರುಂಡ ಎಂಜಲು ಕೂಡ
ಪವಿತ್ರ ಎನ್ನುವರು' ಎಂದನಾತ


ಇರಲಿ,
ಅವರು ನಡೆವ ದಾರಿಗುಂಟ
ಒಂದಷ್ಟು ಅರವಟ್ಟಿಗೆ ಹಾಗೆ; ಆ ಇಬ್ಬರ ಮದ್ಯೆ
ಅಂತರ ಮರೆಸಲೊಂದು ಗೊರವಂಕ ನಿನ್ನದೇ ಹಾಡು
ಮತ್ತೆ ಮರೆಯದೆ ಆಕೆಗೆ ನೆನಪಿಸು
ಅಂಗಳಕೆ ಹಸಿರುಡಿಸಿ ; ಹುಣಿಸೆಗೆ ಹೂ-ಮುಡಿಸಿ
ಪುಟ್ಟ ಗುಡಿಸಲಿಗೆ ಒರಗಿ ಕಾದಿರುವನು ಮೀರ
ದೀದಿಯ ಬರುವಿಗಾಗಿ ಇಡೀ ಮೈದಾನವನೆ ತೆರೆದಿಟ್ಟು
ಒಮ್ಮೆ ಬಂದು ಹೋಗಲು ಹೇಳು ದಯವಿಟ್ಟು!


(ಸ್ಪೂರ್ತಿ : ಚಲಂ'ರ ಮೈದಾನಂ ಕಾದಂಬರಿ)

No comments: