Tuesday, January 6, 2009

ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ!



ದೀಪಗಳು ಮಲಗುವ ಹೊತ್ತು
ಬಹಳ ಹಿಂದಿನ ಮಾತೇನಲ್ಲ
ಕೋಟೆ ಗೋಡೆಯ ಕೆಳಗೆ
ಅವಿತ ಕತ್ತಲಿನಲ್ಲಿ
ಹುಟ್ಟು ಹಬ್ಬಕೆ ಹುಣ್ಣಿಮೆ ನೋಡೆಂದವರು
ಸಂಜೆಯೊಂದಿಗೆ ಸಂಚು
ಹೂಡಿದ್ದು ತಿಳಿಯದೆ ಅಲ್ಲಿ
ಅಮಾಯಕ ಗಾರೆ ಕೆಲಸದ ಹುಡುಗರು
ಸುರಿದ ನಲ್ಲೆಯರ ನೆನಪಿನಾ ಮಳೆಗೆ
ನಕ್ಷತ್ರ ಹೂತಿಟ್ಟು ಆಲಿಕಲ್ಲು ಆಯುತಿದ್ದರು!


ಬಿರಿದ ಎದೆಗಳ ಮೇಲಾಣೆ
ನೀವು ರಾಮಕೋಟಿಯ ಬರೆವಾಗ
'ರಾತ್ರಿಗಳು ಇಷ್ಟು ಸುದೀರ್ಘ ಏಕೆಂದು
ಇಲ್ಲಿ ದೈವಪಟದೆದುರು
ಧರಣಿ ಹೂಡಿದ್ದರು ಮುಡಿ ಸೂಳೆಯರು !
ಪಾಪ ಭಾಷಣದ ಚಪ್ಪಾಳೆಗೆ
ಕೇಳಿಸಿರಲಿಕ್ಕಿಲ್ಲ ಹೆಣಬಿದ್ದ ಸದ್ದು ಮತ್ತು;
ಹಾದ ಬುಲೆಟ್ಟಿನ ವೇಗ ಪೇದೆ ಎದೆಗೆ
ಮತ್ತೊಂದು ನಕ್ಷತ್ರ ತಂದದ್ದು!


ದೇವರ ಮೇಲಾಣೆ ಆತನಿಗೂ
ನೆಮ್ಮದಿ ಇಲ್ಲ ಈಗ!
ಹಲ್ಲಿ ಆಕಳಿಸುವ ಗಳಿಗೆ
ಬೆಟ್ಟ ಕೆಳಗಿಟ್ಟ ಹನುಮನಿಗೆ ಗುಮಾನಿ,
ಹೆಬ್ಬೆರಳ ಬೇಡಿದ್ದು ಅನುಮಾನಿಸುವ
ಬೇಡರ ಹುಡುಗ ಕಟ-ಕಟೆ ಹತ್ತಿದ್ದಾನೆ!
ಕಾಲು ಸೋತ ಶಿಲಾಬಾಲಕೆ
ಜಾಹಿರಾತು ನೋಡುತ್ತಿದ್ದಾಳೆ ಕೂತು
'ಶ್ರಮಿಸುವ ಪಾದಗಳಿಗೆ ಸವೆದ ಚಪ್ಪಲಿ!


ಇನ್ನು ತೋಪಿನಲ್ಲಿ
ತೂರಿಬಿಟ್ಟ ಮುತ್ತು ತನಗೆ ತಲುಪಿಲ್ಲ
ಎನ್ನುವ ಆಕೆಯ ದೂರನು ಆತ
ಸಂದೇಹ ಪಡುತ್ತಾನೆ!


ಸಂಜೆ ಸಮಾಧಿಯ ಮೇಲೆ
ಸೌಗಂಧಿಯ ಹೆರಿಗೆ
ಸಹಿಸಲಾಗುತ್ತಿಲ್ಲ ಪಾಪ ಮೊದಲ ನೋವು
ಅಮಾಯಕ ಹಕ್ಕಿ ಮರಿಗೆ!
ಅಗೋ ಸ್ಮಶಾನಗಳು ಮುಚ್ಚಲಿವೆ
ದಯವಿಟ್ಟು ಮನುಷ್ಯರಿದ್ದಾರೆ ಕಳುಹಿಸಿ!

No comments: