Tuesday, July 12, 2011

ನವಿಲು ಸಾಕಿದೆನವ್ವ...





ನವಿಲು ಸಾಕಿದೆನವ್ವ
ನಾನೊಂದ ನವಿಲು ಸಾಕಿದೆನವ್ವ
ನವಿಲು ಸಾಕಿದೆನವ್ವ
ಬಣ್ಣದ ನವಿಲು ಸಾಕಿದೆನವ್ವ

ಬೆರಳಾಗ ಗರಿಗೆದರಿತ್ತು
ನೆರಳಾಗ ಕಣ್ಣು ಹೊರಳಿತ್ತು
ಸುಣ್ಣದ ಗ್ವಾಡಿ ಮ್ಯಾಲ
ಚಣ್ಣ೦ತ ನೆಗೆದಾಡಿತ್ತು II ನವಿಲು ಸಾಕಿದೆನವ್ವ II

ನಟ್ಟನಡು ಹಗಲಿನಾಗ
ಗುಟ್ಟಾಗಿ ಕೂಡುವ ನವಿಲು
ತಿಂಗಳದ ಬೆಳಕಿನ್ಯಾಗ
ಅಂಗಳಕ ಬರುವ ನವಿಲು II ನವಿಲು ಸಾಕಿದೆನವ್ವ II

ಪಾತರದ ಪಂಚೆ ಉಟ್ಟು
ಯಾತರದೊ ಹಾಡ ಕಟ್ಟಿ
ಬೆಳಕಿನ ದಿಬ್ಬದ ಮ್ಯಾಲ
ಕತ್ತಲು ಕುಣಿದ್ಹ೦ಗಿರುವ II ನವಿಲು ಸಾಕಿದೆನವ್ವ II

ಪಾಟಿಚೀಲದ ಒಳಗಾ
ಕ್ವಾಟೆಯ ಮಾಡಿಕೊಂಡು
ಮೂರು ತಿಂಗಳದೊಳಗ
ಆರಾರು ಮಕ್ಕಳ ಹಡೆವ II ನವಿಲು ಸಾಕಿದೆನವ್ವ II

ಮೂರು ಲೋಕದ ಕಣ್ಣು
ಸೆಳೆದಂತ ಮೂಗುತಿ ಹೆಣ್ಣು
ಒಡೆದ ಬಲೆ ಚೂರಿನಲ್ಲು
ಕಟೆದ್ಹ೦ಗ ಕಾಮನಬಿಲ್ಲು II ನವಿಲು ಸಾಕಿದೆನವ್ವ II

ಒಂಟಿ ಕಾಲಿಲೆ ಕುಣಿದು
ಮೋಡದ ಗಂಟೆ ಬಾರಿಸಿದಂತ
ಎಂಟೂರು ರೈತರ ಕರೆದು
ಭೂಮಿ ಕುಂಟೆ ಹೊಡಿಸಿದಂತ II ನವಿಲು ಸಾಕಿದೆನವ್ವ II

Sunday, June 5, 2011


ತೆಲುಗು ಕಾವ್ಯ ಜಾತ್ರೆಯಲ್ಲಿ ಗೇಯರೂಪ ಕವಿತೆಯ ತೇರು ಎಳೆದು ಬಹುದೂರ ಹಾದಿ ಸವೆಸಿದ ರಚನಾಕಾರರಿದ್ದರೆ. ಆ ಹಾದಿ ತುಳಿದ ಅನೇಕ ಆಧುನಿಕ ಕವಿಗಳು ಇಲ್ಲಿದ್ದಾರೆ. ಇಂತಹ ಗೇಯ ಕವಿತೆಗೆ ಮರುಜನ್ಮ ಕೊಟ್ಟಿದ್ದು ಗದ್ದರ್. ಆದರೆ ಆ ಕೂಸನ್ನು ಎತ್ತಿ, ಆಡಿಸಿ-ಮುದ್ದಾಡುತ್ತಿರುವುದು ಗೋರಟಿ ವೆಂಕನ್ನ. ಮೂರು ದಶಕಗಳ ಕಾಲ ಕಾವ್ಯ ಕೃಷಿಯಲ್ಲಿ ತೊಡಗಿರುವ ವೆಂಕನ್ನನ ದನಿಗೆ ಹಳ್ಳಿಗಾಡಿನಲ್ಲಿ ಅಲ್ಲೆಲ್ಲೋ ಅಲೆಯುತ್ತಿರುವ ದಾಸಯ್ಯನ ಏಕನಾದದ ಗತ್ತಿದೆ. ಜಾಗತೀಕರಣದ ಕುಲುಮೆಯಲ್ಲಿ ನಲುಗುತ್ತಿರುವ ಗ್ರಾಮ ವೃತ್ತಿಗಳು, ಅಲ್ಲಿನ ಕರುಣಾಜನಕ ಬದುಕಿನ ಸ್ಥಿತಿಯೇ ಇವರ ಕಾವ್ಯದ ವಸ್ತು. ಪ್ರಕಟವಾದ ಸಂಕಲನಗಳು: 'ಏಕನಾದಂ', 'ರೇಲ ಪೂತಲು' ಮತ್ತು 'ಅಲ ಸೆಂದ್ರವಂಕ'. ೨೦೧೦ ರಲ್ಲಿ ಪ್ರಕಟವಾದ 'ಅಲ ಸೆಂದ್ರವಂಕ' ಸಂಕಲನದಿಂದ 'ವಾನೋಚ್ಚೆನಮ್ಮಾ' ಕವಿತೆಯ ಅನುವಾದ ಈ "ಮಳೆ ಬಂತಮ್ಮಾ.."

ಮಳೆ ಬಂತಮ್ಮಾ...

ಮಳೆ ಬಂತಮ್ಮಾ…

ಮಳೆ ಬಂತಮ್ಮಾ ನೆರೆ ಬಂತಮ್ಮಾ
ಮಳೆಯ ಜತೆಯಾಗಿ ತೊರೆ ಬಂತಮ್ಮಾ
ಮರದ ಹೆರಳ ಮೇಲೆ ಬೆರಳು ಬೆರಳಾಗಿ ಉದುರಿ
ದಡದ ಬಂಡೆ ಮೇಲೆ ಗಂಧದಿ ಹರಿದಿದೆ
ಕೊಟ್ಟಿಗೆಗಿಳಿದು ಕೊಳೆಯೆಲ್ಲ ತೊಳೆದು
ಕೋಳಿಹುಂಜ ತುರುಬು ನವಿರಾಗಿ ಸವರಿ
ಎಮ್ಮೆಕೋಣಗಳಿಗೆ ಗಮ್ಮತ್ತು ತಂದಿದೆ
ದನದ ಹಿಂಡನು ಕರೆದು ಕೆರೆಯಲ್ಲಿ ಅದ್ದೀದೆ IIಮಳೆ ಬಂತಮ್ಮಾ II

ಹದ್ದುಗೂಡಿನಲ್ಲಿ ಹುಲ್ಲನು ತೋಯಿಸಿ
ಗುಬ್ಬಿಗೂಡಿನ ಕಲ್ಲು ಹರಳನು ಸರಿಸಿದೆ
ಟಿಟ್ಟಿಭ ಗಂಟಲು ಸಿಹಿಯನು ಹೆಚ್ಚಿಸಿ
ಪಿಕಳಾರ ಮೂಗಿನ ಪಾಚಿಯ ತೊಳೆದಿದೆ
ಎತ್ತಿನ ಡುಬ್ಬವ ಮುದ್ದಾಡಿ ನಲಿದು
ನೇಗಿಲ ಒಡಲನು ತಣ್ಣಗೆ ಮಾಡಿದೆ IIಮಳೆ ಬಂತಮ್ಮಾ II

ಹೊಸ ನೀರಾಗಿ ಬಂದು ಹೊಂಡಾವ ಸೇರಿ
ಹಸಿರು ಪಾಚಿಯ ತುಕ್ಕು ಹಸನಾಗಿ ತೊಳೆದಿದೆ
ಮೀನಿಗೆನೋ ನೀರ ಹುಳಿಯನು ಕುಡಿಸಿದೆ
ಕೊಕ್ಕರೆಗೆ ಔತಣದ ಕೋರಿಕೆ ತಂದಿದೆ
ಕಪ್ಪೆಗಳ ಹಬ್ಬವ ಕಣ್ಣಾರೆ ಕಂಡು
ಆಮೆ ಮದುವೆಗೆ ತಲೆನೀರು ಸುರಿದಿದೆ IIಮಳೆ ಬಂತಮ್ಮಾ II

ಕರಿ ನೆಲದ ಬಿರುಕೆಲ್ಲ ಕೈಯ್ಯಾರೆ ಸವರಿ
ಎರೆಭೂಮಿ ನೆಲವನು ಗದ್ದೆಯ ಮಾಡಿದೆ
ಮಣ್ಣುಗಡ್ಡೆಯ ನಡುವೆ ಖವ್ವಾತು ಮಾಡಿ
ಸವಳು ಭೂಮಿಯ ತಾಕಿ ಓಟವ ಕಿತ್ತಿದೆ
ಉಕ್ಕುವ ಹೆಂಡದಿ ತಣ್ಣೀರು ಸುರಿದು
ಈಚಲುಗಿಡ ಗಡಿಗೆ ಮೂತಿಯ ತೊಳೆದಿದೆ IIಮಳೆ ಬಂತಮ್ಮಾ II

ತಾ ಬರುವ ಮುಂಚೇನೆ ತೂಮುಗಳ ಎಬ್ಬಿಸಿ
ತನ್ನ ಹಾಡಿಗೆ ತಾನೇ ತಾಳ ಹಾಕಿದೆ ನೋಡು
ಬಿಳಿ ಮಲ್ಲಿಗೆ ಬಣ್ಣ ಮತ್ತಷ್ಟು ಬಿಳುಪಾಗಿಸಿ
ಕೆಂಪು ಮಲ್ಲಿಗೆ ತೊಳೆದು ಕಂಪನು ಸೂಸಿದೆ
ತುಲಶಮ್ಮ ದೀಪದ ಚಿಪ್ಪುವಿನಲಿ ಸೇರಿ
ಹೂ ಬಿಸಿಲ ಹರಳಲ್ಲಿ ನಿಗ ನಿಗಾ ಎಂದಿದೆ IIಮಳೆ ಬಂತಮ್ಮಾ II

ವೆಮುಲಾಡ ರಾಜನ್ನ ಪ್ರಾರ್ಥನೆ ನೋಡಿ
ಪಕ್ಕದ ಮನೆಗಳ ಜಳ ಜಳ ತೊಳೆದಿದೆ
ಅರಳಿ ಎಲೆ ತೋಯಿಸಿ ಉರುಳಿ ಉರುಳಿ ಬಿದ್ದು
ಸಾಧುಗಳ ಸಮಾಧಿ ಸನ್ನಿಧಿಗೆ ಸೇರಿದೆ
ಸೂಫಿ ದರ್ಗಾ ಸುತ್ತಿ ಸಲಾಮು ಮಾಡಿದೆ
ನೆಗೆವ ನಂದಿಕೋಲಿಗೆ ಬೆಳ್ಳಿ ಮೆರುಗದ್ದಿದೆ IIಮಳೆ ಬಂತಮ್ಮಾ II

ಹರಿದಾಡಿ ಹರಿದಾಡಿ ಗೋದಾವರಿಯನು ಸೇರಿ
ಸೀತಮ್ಮ ಪಾದಗಳ ಶಿರಭಾಗಿ ತಾಕಿದೆ
ಅಂಕು ಡೊಂಕಾಗಿ ವನವೆಲ್ಲ ತಿರುಗಿ
ಕೃಷ್ಣಮ್ಮ ಒಡಲಲಿ ಇಷ್ಟಾದಿ ಉಡುಗಿದೆ
ದುಂದುಭಿ ತಲೆ ತಾಕಿ ದೂಳೆಲ್ಲ ತೊಳೆದು
ಅಂದಾದ ಉಸುಕನು ಕನ್ನಡಿಯ ಮಾಡಿದೆ
ಇಷ್ಟ ಇದೆಯೋ ಇಲ್ಲೋ ಪ್ಯಾಟೆಗೆ ಬಂದಿದೆ
ಮೂಗು ಮುಚ್ಚಿಕೊಂಡು ಮೂಸಿಯಲಿ ಮುಳುಗಿದೆ IIಮಳೆ ಬಂತಮ್ಮಾ II


_________________________________________________________________
ತೂಮು= ಮಳೆಹುಳ, ಮೂಸಿನದಿ= ಹೈದರಾಬಾದ್ ನಗರದಲ್ಲಿ ಹರಿಯುವ (ಈಗ ಚರಂಡಿಯಾಗಿ ಉಳಿದ) ನದಿ ಹೆಸರು. ವೆಮುಲಾಡ ರಾಜನ್ನ= ಕರೀಂ ನಗರ ಜಿಲ್ಲೆಯ ವೆಮುಲವಾಡದಲ್ಲಿರುವ ದೇವಸ್ಥಾನ ಮತ್ತು ಅಲ್ಲಿರುವ ರಾಜ ರಾಜೇಶ್ವರ ಸ್ವಾಮಿ.


ಕನ್ನಡಕ್ಕೆ : ರಮೇಶ ಅರೋಲಿ.

Saturday, April 9, 2011

ಅಳಿಲುಂಡ ಗೂಡಾಗ ಮಳೆ ನಿಂತು ನೋಡೈತೆ


ಸುವ್ವಿ ಸುವ್ವಿ ಲಾಲಿ ಸುವ್ವಿ ಸುವ್ವಕ್ಕ
ಸುಮ್ಮಾನೆ ಕುಂತ್ಯಾಕ ಮಳೆ ಸುರಿಯೋ ಕಾಲಕ್ಕ
ನೀ ಸುಮ್ಮನೆ ಕುಂತ್ಯಾಕ ಮಳೆ ಸುರಿಯೋ ಕಾಲಕ್ಕ

ಬೂದಿಯಾಗುವ ಗುಟ್ಟು ಗಾಳಿ ಮಾತಿಗೆ ಬಿಟ್ಟು
ರಾತ್ರಿ ಅಂಗಳಕ ಹಗಲಿನ ಸಸಿನೆಟ್ಟು
ಕಾಯುತ್ತಾ ಕಾಯುತ್ತ ಕಾಯಾದೇನೋ ನಾ ಹಣ್ಣಾದೇನೋ

ಯಾರ ಅಂಜಿಕಿ ಊರ ಸಣ್ಣ ಹಳ್ಳಕ್ಕ
ಎಲ್ಲೆಲ್ಲೋ ಹರಿಯಿತು ಯಾರದೋ ಪುಣ್ಯಕ್ಕ
ಪುಣ್ಯ ಎಲ್ಲೆಲ್ಲೋ ಹರಿಯಿತು ಯಾರದೋ ಪಾಪಕ್ಕ

ನೆಂಟ ನೆಂಟರ ಗಂಟು ಕಾಲು ಹಾದ್ಯಾಗ
ನಡು ಇರುಳ ಮೆರವಣಿಗಿ ಕಾಗಿ ಬಿದ್ಯಾಗ
ನಡಿಯುತ್ತಾ ನಡಿಯುತ್ತಾ ಕೆರೆಯಾದೇನೋ ನಾ ನದಿಯಾದೇನೋ

ನೆಲವೆಲ್ಲ ನಕ್ಕೀತು ಮಕ್ಕಾಳಾಡೋದಕ್ಕ
ಆಕಾಶ ಅತ್ತೀತು ಅವರಿಲ್ಲದ ಲೋಕಕ್ಕ
ಲೋಕ ಮೂಕವಾಯಿತು ನೋಡ ಮೋಡಯಿಲ್ಲದ ವೇಳಕ್ಕ

ಹೂ ಉದುರಿ ಹೋದವು ಹೂ-ಬಿಸಿಲ ಕಾಡಲ್ಲಿ
ಮಳೆ ನಿಂತು ಹೋಯಿತು ಅಳಿಲುಂಡ ಗೂಡಲ್ಲಿ
ನೋಡುತ್ತಾ ನೋಡುತ್ತಾ ಗಿದ್ವಾದೇನೋ ನಾ ದಡವಾದೇನೋ

ಗಜಲ್


ಎಷ್ಟು ಕಾಲ ಎಂಥ ಮಾತು ವ್ಯರ್ಥ ಮಾಡಿತು ಸಣ್ಣ ಮುನಿಸಿಗೆ ಜಗವೆಂಥ ಸೋಜಿಗ
ಕಟ್ಟಲಾಗದೆ ಕೈಗೋಡೆ ಕಣ್ಣ ಝಾರಿಗೆ ನಿದ್ರೆ ಮರೆಯಿತು ಜಗವೆಂಥ ಸೋಜಿಗ

ಎಷ್ಟು ರೂಮಿಗಳು ಎಂಥ ಗಜಲುಗಳು ದುಃಖ ನಿಲ್ಲಿಸದಿರಲು
ತಾಯಿತ ಕಟ್ಟಿತು ಮೊಲೆಗೂಸಿನ ಅಳುಕೇಕೆಗೆ ಜಗವೆಂಥ ಸೋಜಿಗ

ಎಷ್ಟು ಬಾದಾಶಗಳು ಎಂಥ ಬಹುದ್ದೂರರು ಗೆದ್ದರು ಸೋತರು
ಕೊನೆಗೆ ಕಟ್ಟಿಸಿಕೊಂಡರು ಗೋರಿ ದಿನಗೂಲಿ ರೊಟ್ಟಿಯ ನೀಡಿ ಜಗವೆಂಥ ಸೋಜಿಗ

ಎಷ್ಟು ಸಾವು ಎಂಥ ಶೋಕ ಋಣದ ಕೊನೆಯ ಮನೆಗೆ
ಮಣ್ಣುಕೊಟ್ಟು ಬೆನ್ನು ಮಾಡಿತು ಮಗುವಾಗುವಾಸೆಗೆ ಜಗವೆಂಥ ಸೋಜಿಗ

ಎಷ್ಟು ಸುಂದರಿಯರು ಎಂಥ ಪ್ರತಿಮೆಗಳು ಲೋಕದಂಗಡಿಯಲ್ಲಿ
ಪಾಪ ಪರಿ ಪರಿಯ ಬೇಡಿದವು ಕ್ಷಣ ಉಸಿರಿಗೆ ಅರೋಲಿಯ ಜಗವೆಂಥ ಸೋಜಿಗ

Tuesday, February 22, 2011

ಕ್ಷಮೆ ಕೋರಿ




ಕಿಕ್ಕಿರಿದ ರಸ್ತೆಗೆ
ಆಕಾಶ ಹಾಸಿ
ತುಕ್ಕು ತೇರಿಗೆ ಚುಕ್ಕಿಗಳಂಟಿಸಿ
ಬೇವಿನ ಮರಕ್ಕೆ ಮಾವಿನ ಎಲೆ ಕಟ್ಟಿ
ಸಂಜೆ ದೇವರ ದರುಶನಕೆ
ಕರೆಯೋಲೆ ಕೊಟ್ಟು
ಬಂದ ಬರಿಗಾಲ ಬಸಯ್ಯರಿಗೆ
ರಥಬೀದಿ ನಿಷೇಧಯೆಂದವರ
ಓ ಆಕಾಶವೇ ಕ್ಷಮಿಸು

ನೀನು ಮಾತು ಕೊಟ್ಟಂತೆ ಸುರಿದ
ಎಲ್ಲ ಹನಿಗಳ ಮುತ್ತಾಗಿಸದೆ ಹೋದೆ
ಸೂಳೆ ಮಕ್ಕಳು ಕೂಡ
ಸುತ್ತ ಎದೆಗಾಯದ ಗಾದೆಗಳೆಂದು
ಕಪ್ಪೆಚಿಪ್ಪುವಿನಲಿ ಮೊಟ್ಟೆಗಳಾಗಿಟ್ಟುಕೊಂಡಿದ್ದೆ
ಪಾಪ ಅಮಾಯಕ ಬಾಲ ಏಸುಗಳು
ಸಮುದ್ರದ ಕಡೆಗಾಲ ಕುಡುಗೋಲಿನೇಟಿಗೆನಲು
ಕಾವು ಕೂಡ ತಗುಲದಂತೆ ಬಚ್ಚಿಟ್ಟುಕೊಂಡಿದ್ದೆ
ಓ ಕಡಲೆ ಕ್ಷಮಿಸು

ನಿನ್ನ ಮುನಿಸಿಗೆ ಸಾವುಗಳಿಲ್ಲಿ
ಸುಗ್ಗಿಯ ನಾಯಿಕೊಡೆ ಕರುಣೆಗೆ
ಅಲೆಯ ತುಟಿಯಾಗಿ ಪಾದಮುತ್ತಿಕ್ಕುವೆ
ನೆಲದ ದಿಮ್ಮನಿಸಿಯ ಮಾತು
ನಿನಗೂ ತಲುಪಲಿ

ಈಗ ಸ್ವಲ್ಪ ಮಳೆಯಾಗಲಿ
ನನಗೆ ಬಾಯಾರಿಕೆ.

Monday, February 14, 2011

ಚಳಿ ಅಂಕುಶಮಿಟ್ಟೋಡೆ ನೆನೆವುದೆನ್ನ ಮನಂ ರಾಯಚೂರು ಸೀಮೆಯುಂ...!




ಭಯ್ಯಾ..ಚಿಕೂ ಜ್ಯೂಸ್ ಹೈ?
ಬನಾನ ಹೈ.(ಮಾಡ್ಬೇಕು)
ಜಲ್ದಿ ಬನಾವೋ.
.................
ಏ ಲಿಜಿಯೇ
ಅರೆ! ಏ ಕ್ಯಾ ಹೈ?
ವಹಿ ಬನಾನ (banana-ಬಾಳೆ ಹಣ್ಣಿನ)ಜ್ಯೂಸ್ !!

ಇದು ನನ್ನ ದೆಹಲಿಯ ಮುಲಾಖಾತ್!

ಫಲವತ್ತಾದ ರಾಯಚೂರಿನ ಬಿಸಿಲ ಮಹಲ್ ನಲ್ಲಿ ಹುಟ್ಟಿದ ನನಗೆ ದೆಹಲಿಯೆಂಬ (ಸದ್ಯ) ಬಿಸಿಲ ಬರಗಾಲದ ಊರಲ್ಲಿ ಕೆಲಸ ಕುದುರಿದ್ದು ಅದೂ ವಿಮೆನ್ಸ್ ಕಾಲೇಜಿನಲ್ಲಿ. ಇಲ್ಲಿಯ ಜನ, ಭಾಷೆ ಮತ್ತವರ ಸ್ವಭಾವ ಅಲ್ಲದೆ ಆಹಾರ ಇತ್ಯಾದಿಗಳೆಲ್ಲವೂ ಭಿನ್ನವೇ ಸರಿ. ದಕ್ಷಿಣದಿಂದ ಬದುಕಿನ ದಂಡಯಾತ್ರೆಗೆ ಬರುವ ಕನ್ನಡಿಗರು ಸೇರಿದಂತೆ ತಮಿಳರು, ಮಲೆಯಾಳಿಗಳು, ತೆಲುಗರು ಇಲ್ಲಿಯವರಿಗೆ ಒಂದೇ ಬೀಡಿ ಫ್ಯಾಕ್ಟರಿಯ ಮದ್ರಾಸಿ ಬ್ರ್ಯಾಂಡುಗಳು.


ಮುಜುಗರವೆಂಬ ಆಜನ್ಮ ಕವಚ ಕುಂಡಲಧಾರಿಯಾದ ನಾನು ಕಮಲ ನೆಹರು ಕಾಲೇಜೆಂಬ (ಮಹಿಳೆಯರಿಗೆ ಮಾತ್ರ!) ವಿಮೆನ್ಸ್ ಕಾಲೇಜಿನ ಗೇಟೆಂಬ ರೈಲ್ವೆ ಹಳಿ ದಾಟುವಾಗ ಸ್ವಲ್ಪ ಅಳಕುತ್ತಲೇ ಒಳ ನಡೆದೆ. ಇನ್ನೇನು ಗಾರ್ಡ್ ರೂಮು ದಾಟಿ ಕಾಲೇಜಿನ ಮುಖ್ಯದ್ವಾರ ಪ್ರವೇಶಿಸಬೇಕು ಅನ್ನೋಷ್ಟರಲ್ಲಿ ಹಿಂದುಗಡೆಯಿಂದ "ಖಬರ್ದಾರ್ ಅಗರ್ ಅಂದರ್ ಗುಸ್ಸ್ನೇಕಿ ಹಿಮ್ಮತ್ ಕಿಯೇ ತೋ" ಎಂಬಂತೆ ರಾಣಾ ಎಂಬ ಗಿಡ್ಡನೆಯ ಆಕೃತಿಯೊಂದು ಬೆನ್ನಿಗೆ ಪಿಸ್ತೋಲ್ ಮಾದರಿಯಾಗಿ ಬಡಿಗೆವೊಂದನ್ನು ಹಿಡಿದು ಹ್ಯಾಂಡ್ಸ್-ಅಪ್ ಎಂದ. ಮೊದಲೇ ಅಲ್ಲಲ್ಲಿ ನಿಂತು ಹೇಗೆ ಎ(ಹೆ)ದುರಿಸಬೇಕು ಎಂದು ತಾಲೀಮು ಮಾಡಿಕೊಂಡು ಬಂದಿದ್ದ ನಾನು ಏಕ್-ದಂ ಜೇಮ್ಸ್-ಬಾಂಡ್ ತೆರನಾಗಿ ಉದ್ದೇಶ ಪೂರಕವಾಗಿ ಚಟೀರನೆ ಇಂಗ್ಲಿಷ್ನಲ್ಲಿ ಹಿಂಗಿಂಗೆ ಹಿಂಗಿಂಗೆ ಅಂತ ಗುಂಡು ಹೊಡೆದು "ಮೈ ಯಹಾ ಸರ್ಕಾರ್ ಕ ನಮಕ್ ಖಾನೆ ಆಯಾ ಹ್ಞೂ" ಎಂದೆ. ಅದಕ್ಕೆ ಆತ ಅಪಾದಮಸ್ತಕವಾಗಿ ಒಮ್ಮೆ ಸ್ಕ್ಯಾನ್ ಮಾಡಿ ಸ್ವಲ್ಪ ನಾಚಿ-ನೀರಾಗಿ "ಟೀಕ್ ಹೈ ಸರ್ ಆಪ್ ಜಾಯಿಯೇ" ಎಂದ. ಆರಂಭದ ತರಗತಿಗಳಲ್ಲಿ ನನ್ನ ಸ್ಥಿತಿ ಮತ್ತು ಗತಿ ಹೇಳತೀರದು. ನನ್ನ ಬ್ರೋಕನ್-ಹೈದರಾಬಾದಿ ಹಿಂದಿಯುಂ ಕಡಲೋಪಾದಿ ವಿದ್ಯಾರ್ಥಿನಿಯರ ನಗೆಯುಂ!


ಇಂಥ ಸ್ಥಿತಿಯಲ್ಲಿ ಮೂರು ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೊಂಥರ ಅ(ಹ)ವಮಾನವಾಗಿ ಪರಿಣಮಿಸಿ ನನ್ನ ಕಾಲ್ ಬೇರಿಲಿನ ಸಂದಿಯನ್ನು ಸೀಳಿ ಬಿಟ್ಟಿದ್ದು ಅಲ್ಲದೆ ಗೃಹ ದಿಗ್ಭಂದನ ಹಾಕಿತು. ಜೊತೆಗೆ ಜನವರಿ ಒಂದರಿಂದ ಟೀಚರ್-ಇನ್-ಇನ್ಚಾರ್ಜ್ ಎಂಬ ಅಧಿಕ ತಲೆ ನೋವು ಕೊಟ್ಟು ಗಹಗಹಿಸಿದ ನನ್ನ ಹಿರಿಯರು "ನಾಚ್ ಬಸಂತಿ ನಾಚ್' ಎಂಬಂತೆ ಉರುಳಾಡಿ ಆನಂದಿಸಿದ್ದು ಆಯಿತು.
ಚಳಿಯೆಂದರೆ ಬರೀ ಧಾರವಾದದಲ್ಲಿದ್ದು ಅನುಭವಿಸಿದ್ದ ನನಗೆ ಅಲ್ಲಿಯ 'ದೈಯಾಲ ಕೋಟ' ದಂತಹ ಕರ್ನಾಟಕ ಕಾಲೇಜು ಮತ್ತು ವಿಶ್ವವಿದ್ಯಾಲಯ ಹಂಚಿಕೊಳ್ಳಬಹುದಾದ ನೆನಪುಕೊಟ್ಟದ್ದು ನಿಜ.ಆದರೆ ಮೊನ್ನೆ ದೆಹಲಿ ಚಳಿ ಮಾತ್ರ ನಡುಗಿಸಿದ ಪರಿ ಅ-ಪೂರ್ವ, ಅನನುಭವ. ಕಳೆದ ಡಿಸೆಂಬರ್ ನಲ್ಲಿಯೇ ಮುಗಿಯ ಬೇಕಿದ್ದ ಪರೀಕ್ಷೆಗಳು ದೆಹಲಿ ವಿ.ವಿ.ಯ ವಿಜ್ಞಾನ ಶಿಕ್ಷಕರ ಸೆಮಿಸ್ಟರ್ ರದ್ಧತಿ ಮುಷ್ಕರದಿಂದಾಗಿ ಈಗ ನಡೆಯುತ್ತಿವೆ. ಬರೀ ಕೋಣೆ ತಪಾಸಣೆ ಇಲ್ಲ ಮೇಲ್ವಿಚಾರಣೆಗೆ ಬರುವವರಿಗೆ ನರನಾಡಿಯ ಬಿಗಿದು ಹಾಕುವ ಚಳಿಯ ಖದರ್ ತಿಳಿಯದು. ಪೆನ್ನು ಹಿಡಿದು ಉತ್ತರಗಳ ಕತ್ತರಿಸುವ ಅನುಭವ ವಿದ್ಯಾರ್ಥಿಗಳಿಗೆ. ಇಡಿ ದೇಹವನ್ನು ಉಣ್ಣೆ-ಸ್ವೆಟರ್ ಗಳಿಂದ ಬಿಗಿದುಕೊಂಡು ಬಂದು ಎಕ್ಸಾಮ್ ಹಾಲಿನಲ್ಲಿ ಕೈ-ಕವಚ ಕಳಚಿದೊಡನೆ ಬೆರಳುಗಳೆಲ್ಲ ಜೋಮು ಹಿಡಿದು 'ಮೆಮೊರಿ ಲಾಸ್' ಎಂಬ ಅನುಭವ ಆಗದೆ ಇರದು.


ಓದಿದ್ದರು ಇದನ್ನು ಓದಿಲ್ಲ ಎಂಬುದು ಸಿರಿಯಸ್ ಸಿನ್ಸಿಯರ್ ವಿದ್ಯರ್ಥಿಗಳದ್ದಾದರೆ ಇನ್ನು ಓದಿರದಿದ್ದರೂ ಪರೀಕ್ಷೆಗೆ ಅಷ್ಟೇ ಸಿರಿಯಸ್(!) ಆಗಿ ಪ್ರಿ-ಪೇರಾಗಿ ಬಂದಿದ್ದ ವಿದ್ಯಾರ್ಥಿನಿಯರ ಚೀಟಿ ಗಳೆಂಬ ಸಮಕಾಲಿನ ಸಣ್ಣ ಸಣ್ಣ ತಾಮ್ರ ಪಟದ ಮಾದರಿಯ ಶಿಲಾಶಾಸನಗಳೆನಾದರು ಸಿಗಬಹುದೇ; ಅವುಗಳ ರಚಿಯಿತರ ವಂಶಾವಳಿ ಏನಾದರು ಪತ್ತೆಯಾಗಬಹುದೇ ಎಂದು ಉತ್ಕನನ ಗೈದ ಕೆಲ ಲೇಡಿ-ಟೀಚರ್ಸ್ ಭೂತ-ಗನ್ನಡಿ ಹಿಡಿದು ಮಾಹಿತಿ ಹಕ್ಕು ಚಲಾಯಿಸಿದ್ದು ಇದೆ. ಇನ್ನು ಇಲ್ಲಿನ ಆಸಕ್ತಿಕರ ಸಾರ್ವಜನಿಕ ಸಂಗತಿಗಳಲ್ಲಿ ಬಸ್ಸು ಪ್ರಮುಖ . ಏಕೆಂದರೆ ಹೆಚ್ಚಾಗಿ ಇಲ್ಲಿ ನಾವು ಹೊರಡಬೇಕಾದ ಅಥವಾ ಇಳಿಯ ಬಯಸುವ ನಿಲ್ದಾಣದ ಬದಲಾಗಿ ಪ್ರಯಾಣದ ದರವನ್ನಾಧರಿಸಿ ಟಿಕೆಟ್ ಕೊಡುವುದು. "ಪಾಂಚ್ ಕ ದೋ" "ದಾಸ್ ಕ ತೀನ್ ದೋ .." ಎಂಬದು ಚಾಲ್ತಿಯಲ್ಲಿದೆ. ಹಾಗೆಯೇ ಕಂಡಕ್ಟರ್ ಮಹಾಶಯರು ಒಮ್ಮೆ ಬಸ್ ಹತ್ತಿ ತಮ್ಮ ಸೀಟಿಗೆ ಮೊಳೆ ಜಡಿದು ಕೊಂಡರೆಂದರೆ ಅಲ್ಲಿಂದ ಏಳುವುದೇ ಇಲ್ಲ. ಸ್ವತಃ ಪ್ರಯಾಣಿಕರು ಅವನಲ್ಲಿಗೆ ಹೋಗಿ ಮಲ್ಲ ಯುದ್ಧಮ್ ಗೈದು ಪಡೆದು ಕೊಳ್ಳಬೇಕು. ಇದರಲ್ಲಿ ಬಹಳ ಸಲ ಮುದುಕರು ಮತ್ತು ಮಹಿಳೆಯರು ಯುದ್ಧದಲ್ಲಿ ಶರಣಾಗಿ ನಿಲ್ದಾಣ ಬಂದೊಡನೆ ಇಳಿದು ಹೋಗೋದು ಸಹಜ.


ಕೆಲವೊಮ್ಮೆ ಹೀಗಾಗಿ ಬಿಡುತ್ತದೆ, ನಮ್ಮೂರ ಕಡೆ ಮಾರೆಮ್ಮನ ಗುಡಿಗೆ ಬಳಿಯುವ ಜಾಜಿ ಬಣ್ಣದಷ್ಟೇ ಮಂದವಾಗಿ ಲಿಪ್ಸ್ಟಿಕ್ ಮೆತ್ತುವ ಸಂಪ್ರದಾಯ ನೂಕು ನುಗ್ಗಲಿಗೆ ಅವರಿವರ ಬಟ್ಟೆಯ ಮೇಲೆ ಯಾರಯಾರದೋ ಅದರ ಲಾಂಛನವು ವೀರಾಜಮಾನವಾಗಿ ಮುದ್ರಿಸುವಂತೆ ಮಾಡಿಬಿಡುತ್ತದೆ. ಇದಕ್ಕೆ ಮೆಟ್ರೋ ಕೂಡ ಹೊರತಲ್ಲ. ಸ್ವಭಾವ ಸ್ವಲ್ಪ ರಾಯಳಸೀಮೆಯದು ಎನಿಸುವ 'ದುಡಿಯುವ ವರ್ಗ'ದ ಮಾತು ತೋಡ ಬಿರುಸಾದರು ಬಹು ಬೇಗ ಅತ್ಮಿಯರಾಗಿಬಿಡುತ್ತಾರೆ. ಇನ್ನು ಕಡ್ಡಾಯವಾಗಿ ನಗರಗಳಿಗೆ ಮಾತ್ರ ಎಂಬಂತೆ ಇಲ್ಲೂ ಕೂಡ ಚಿಲ್ಲರೆ ಜೇಬುಗಳ್ಳರು, ಸೂಟ್ ಕೇಸ್ ಕಳ್ಳರು ಇತ್ಯಾದಿ ಇದ್ದೆ ಇದ್ದಾರೆ. ಆಟೋ ರಿಕ್ಷಾ ಡ್ರೈವರ್ ಗಳ ಬಗ್ಗೆ ಒಳ್ಳೆ ಮಾತೆ ಇವೆ. ಆದರೆ ಪ್ರತಿ ಆಹಾರದಲ್ಲೂ ಆಲೂಗಡ್ಡೆಯನ್ನು ಉಪ್ಪು ಬಳಸಿದಂತೆಯೂ ಕೆಲವೊಮ್ಮೆ ನೀರು ಬಳಸಿದಂತೆಯೂ ಇರುವ ಇಲ್ಲಿನ ಅಡುಗೆ ಮಾತ್ರ ದಕ್ಷಿಣಾದಿಗಳಿಗೆ ರೊಂಬ ರೇಜಿಗೆ ತರದೇ ಇರದು. ಇನ್ನು ಕೊಂಚಂ ತೆಲುಗು; ಕೊಂಚಂ ತಮಿಳ್ ತಿಳಿದಿದ್ದರಂತೂ ಮಲ್ಲು ಹೋಟೆಲ್ ಸೇರಿದಂತೆ ತಮಿಳ್ ಕ್ಯಾಂಟೀನ್ ಗಳಲ್ಲಿ ಇಡ್ಲಿ ವಡೆ ಜೊತೆ ಸ್ವಲ್ಪ ಚಟ್ನಿ ಸಾಂಬಾರ್ ಅಧಿಕವಾಗಿ ದೊರಕುವುದು ಖಚಿತ.


'ಉಳ್ಳವರು ಉಲನ್ ಕೊಳ್ಳುವರಯ್ಯ, ಇಲ್ಲದವರು ನಾವೇನು ಕಮ್ಮಿ ಅಯ್ಯಾ, ಸೀರೆಯೇ ಸ್ವೆಟರ್; ಶಾಲೆ ಮಫ್ಲರ್' ಎಂದು ಚಳಿಯಿಂದ ರಕ್ಷಿಸಿಕೊಳ್ಳಲು ಫುಟ್-ಪಾತ್ ಗೆ ಬರುವ ಮಕ್ಕಳು ಲಾಲ್ ಬತ್ತಿ (ಟ್ರಾಫಿಕ್ ಸಿಗ್ನಲ್)ಗಳಲ್ಲಿ ಓಡಾಡುವ ವಾಹನಗಳ ವೇಗವನ್ನು ಲೆಕ್ಕಿಸದೆ ಚಿರಂಜಿವಿಗಳಂತೆ ಮಂಜನ್ನು ಭೇದಿಸಿ ಕಾರುಗಳ ಕಿಟಕಿಗಳಿಗೆ ಮುಖವಿಟ್ಟು ಬೇಡುವ ದೃಶ್ಯ ಕನ್ನಡಿಗಳನ್ನು ವೈಬರ್ ತೊಳೆದು ಹಾಕಿದಷ್ಟೇ ನಿಚ್ಚಳ.

Thursday, July 15, 2010